ಮೂಡುಬಿದಿರೆ: ದರೆಗುಡ್ಡೆ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಲೋಗೊವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ತಿಮ್ಮಯ್ಯ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ ಬುಧವಾರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಎದಮೇರು ಮಾತನಾಡಿ, ಇಟಲ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಪಣಪಿಲ ಅರಮನೆಯ ಪಟ್ಟದ ದೇವರಾಗಿದ್ದು 9 ಮಾಗಣೆಗಳ ಗ್ರಾಮವನ್ನು ಹೊಂದಿರುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಊರವರ ಸಹಕಾರದೊಂದಿಗೆ ದೇವಸ್ಥಾನವನ್ನು ಶಿಲಾಮಯವಾಗಿ ಅಭಿವೃದ್ಧಿಪಡಿಸಲು ಜೀರ್ಣೋದ್ಧಾರ ಕೆಲಸಗಳು ಭರದಿಂದ ಸಾಗುತ್ತಿದೆ ಎಂದರು.
ಎಪ್ರಿಲ್ 23ರಿಂದ ಮೇ 2ರವರೆಗೆ ವರ್ಷಾವಧಿ ಜಾತ್ರೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 30 ರಂದು ಶ್ರೀ ಸೋಮನಾಥ ದೇವರು, ಅಗ್ನಿ ಗಣಪತಿ ಹಾಗೂ ಮಹಿಷ ಮರ್ಧಿನಿ ದೇವಿಯ ಪ್ರತಿಷ್ಠಾಪನೆ ನಡೆಯಲಿದ್ದು, ಮೇ 2ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಈಗಾಗಲೇ ನಾಗ ಪ್ರತಿಷ್ಠೆ, ಧ್ವಜ ಸ್ತಂಭ ಪ್ರತಿಷ್ಠೆ ಕಾರ್ಯಕ್ರಮ ನಡೆದಿದೆ.
ಎಪ್ರಿಲ್ 27ರಂದು ಸಂಜೆ 4ಕ್ಕೆ ಅಳಿಯೂರಿನಿಂದ ದೇವಸ್ಥಾನದವರೆಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ವಿಮಲ್ ಕುಮಾರ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಆರಿಗ ಮಜಲೋಡಿ, ಜತೆ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್ ಹನ್ನೇರು ಉಪಸ್ಥಿತರಿದ್ದರು.
Leave a Reply