ಮೂಡುಬಿದಿರೆ: ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಭೂ ಮಸೂದೆಯನ್ನು ಪರಿಣಾಮ ಅನುಷ್ಠಾನಗೊಳಿಸಿದ್ದರಿಂದ ಪರಿಣಾಮವಾಗಿ ಗೇಣಿದಾರರು ಸ್ವಂತ ಹಿಡುವಳಿ ದಾರರಾದದ್ದು ಕ್ರಾಂತಿಕಾರಿ ಬದಲಾವಣೆ ಆದರೆ, ಯಾವುದೇ ಭೂಮಿ ಇಲ್ಲದೆ ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ಕುಳಿತಮಗೆ ನಿವೇಶನದ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯ ತೊಡಗಿದ ಬಳಿಕ ಸ್ವಂತದ್ದಾದ ನಿವೇಶನದಲ್ಲಿ ಮನೆಕಟ್ಟಿ ವಾಸವಾಗುವ ಕನಸು ನನಸಾಗತೊಡಗಿದೆ. ಈ ದಿಸೆಯಲ್ಲಿ ಜನಪ್ರತಿನಿಧಿಗಳ ಜತೆಗೆ ಕಂದಾಯ ಅಧಿಕಾರಿಗಳು, ಸಿಬಂದಿಗಳ ಸಹಕಾರ ಶ್ಲಾಘನೀಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶುಕ್ರವಾರ ಸಮಾಜ ಮಂದಿರದ ಸ್ವರ್ಣಮಂದಿರದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ತಾಲೂಕಿನ 334 ಮಂದಿ ಫಲಾನುಭವಿಗಳಿಗೆ 94 C 94CC ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.
ಬಡವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ದೇವರಾಜ ಅರಸು ಸರ್ಕಾರವು ಭೂಮಿಯಿಲ್ಲದ ಜನರಿಗೆ ಜಮೀನ್ದಾರರ ಭೂಮಿಯನ್ನು ಕಾನೂನಾತ್ಮಕವಾಗಿ ಹಂಚಿದ್ದರಿಂದ ಕ್ರಾಂತಿಕಾರಿ ಬದಲಾವಣೆ ಯಾಗಿದೆ. ಗುಂಡೂರಾವ್ ಆಡಳಿತಾವಧಿಯಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಯಿತು. ಇದೀಗ ಸಿದ್ದರಾಮಯ್ಯ ಸರ್ಕಾರವು ಬಡವರಿಗೆ ಭೂಮಿ ನೀಡುವುದನ್ನು ಆದ್ಯತೆಯಾಗಿ ಪರಿಗಣಿಸಿದ್ದು ಇದರಿಂದ ಬಡವರ ಬದುಕು ಹಸನಾಗಲಿದೆ ಎಂದರು.
ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ, ಶಿಕ್ಷಣ ಸರ್ಕಾರದ ಆದ್ಯತೆಯಾಗಿದೆ. ಇದರಿಂದ ಬಡತನ ನಿರ್ಮಾಲನೆಯಾಗಲಿದೆ. ಬಡವರಿಗೆ ಅನುಕೂಲವಾಗುವಂತೆ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದಕ್ಕಾಗಿ 50 ಸಾವಿರ ಕೋಟಿ ರೂ ವ್ಯಯಿಸಲಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂವತ್ತು ಸಾವಿರ ಮನೆಗಳಿಗೆ ಹಣ ಜಮೆ ಯಾಗುತ್ತಿದೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ.
ಹಕ್ಕುಪತ್ರ ಸಿಗದ ಫಲಾನುಭವಿಗಳಿಗೆ ಹಕ್ಕುಪತ್ರ ಸಿಕ್ಕಿದೆ. ರಾಜಕೀಯ ಬಿಟ್ಟು ಯಾವುದೇ ಪಕ್ಷಗಳು ಒಟ್ಟಾಗಿ ಒಟ್ಟಾಗಿ ಕೆಲಸ ಮಾಡಿ ಬಡ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡಿದರೆ ಬಡವರಿಗೆ ನಿಜವಾಗಿಯೂ ನ್ಯಾಯ ಸಿಕ್ಕಂತಾಗುತ್ತದೆ. ಹಕ್ಕುಪತ್ರ ಸಿಗದೆ ಇನ್ನೂ ಬಾಕಿ ಉಳಿದಿರುವ ಬಡ ಕುಟುಂಬಗಳಿಗೆ
ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸಿಗಬೇಕಾಗಿದೆ ಈ ನಿಟ್ಟಿನಲ್ಲಿ ಮುಂದಿನ ಸೋಮವಾರದಿಂದಲೇ ಅಂತವರ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ಒದಗಿಸುವ ಕೆಲಸವನ್ನು ಜನಪ್ರತಿನಿಧಿಗಳು,ಜನಪ್ರತಿನಿಧಿಗಳಾಗಲು ಬಯಸುವವರು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ಸರಕಾರದ ಅವಧಿಯಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು. ಈಗ ಉಳಿದವರಿಗೆ ಹಕ್ಕು ಪತ್ರ ನೀಡಲಾಗಿದೆ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಖುದ್ದು ಫಲಾನುಭವಿಗಳನ್ನು ಭೇಟಿಯಾಗಿ ತಾರತಮ್ಯವಿಲ್ಲದೆ ಹಕ್ಕು ಪತ್ರ ವಿತರಿಸಲಾಗಿದೆ ಎಂದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಉಪಸ್ಥಿತರಿದ್ದರು.
ತಹಸೀಲ್ದಾರ್ ಪ್ರದೀಪ್ ಹುರ್ಡೇಕೆರ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.















Leave a Reply