ನಲಿಕೆ ಸಮಾಜ ಸೇವಾ ಸಂಘದಿಂದ ಪುಸ್ತಕ ವಿತರಣೆ, ಸಮಾಜ ಸೇವಕಗೆ ಸನ್ಮಾನ

ಮೂಡುಬಿದಿರೆ ತಾಲೂಕು ಪಾಣರ ಅಜಿಲ ಯಾನೆ ನಲಿಕೆ ಯವರ ಸಮಾಜ ಸೇವಾ ಸಂಘದ 3ನೇ  ವಾರ್ಷಿಕೋತ್ಸವ-ಪುಸ್ತಕ ವಿತರಣೆ-ಸಮ್ಮಾನ ಕಾರ್ಯಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ  ಉದ್ಯಮಿ ಶ್ರೀಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಇದೆ.  ಶಿಕ್ಷಣದಿಂದ ಸಮಾಜದ ಬೆಳವಣಿಗೆ ಸಾಧ್ಯ ಆದ್ದರಿಂದ ಸಮಾಜದ  ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆಯುವಂತ್ತಾಗಬೇಕು ಎಂದ ಅವರು ಸಂಘದ ಎಲ್ಲ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಎನ್.ಕೆ. ಸಾಲ್ಯಾನ್ ಮಾರೂರು ಅಧ್ಯಕ್ಷತೆ ವಹಿಸಿದ್ದರು.

ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ ಎಂ.ಡಿ. ವೆಂಕಪ್ಪ ಭಾಗವಹಿಸಿ ಮಾತನಾಡಿ  ದೈವಾರಾಧನೆ ಎಂಬ ಧಾರ್ಮಿಕ ಸೇವಾ ಕಾವ್ಯದಲ್ಲಿ ತೊಡಗಿಸಿಕೊಂಡವರಿಗೆ ಮಾಸಾಶನ ನೀಡಬೇಕು ಎನ್ನುವ ಕೂಗು ಇತ್ತು ಆದರೆ  ಅದು ಈವರೆಗೂ ಕಾರ್ಯಗತವಾಗಿಲ್ಲ ದಿರುವುದು ಶೋಚನೀಯ. ಸರಕಾರ ಇನ್ನಾ ದರೂ ಈ ವರ್ಗದ ಮಂದಿಗೆ ಮಾಸಾಶನ ಒದಗಿಸಲು ಮುಂದಾಗ ಬೇಕಾಗಿದೆ ಎಂದು  ಆಗ್ರಹಿಸಿದರು.

ಸನ್ಮಾನ : ಶೋಚನೀಯ ಸ್ಥಿತಿಯಲ್ಲಿರುವ  ಬಡಕುಟುಂಬಗಳಿಗೆ ಮನೆ ಗಳನ್ನು ಕಟ್ಟಿಸಿಕೊಡುತ್ತಿರುವ ಸಮಾಜ ಸೇವಕ, ಮೂಡುಬಿದಿರೆ ಐರಾವತ ಆ್ಯಂಬುಲೆನ್ಸ್ ಚಾಲಕ ಮಾಲಕ ಅನಿಲ್ ರೂಬನ್ ಮೆಂಡೋನ್ಸಾ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.  

 ವರಂಗ ಶ್ರೀದೇವಿ ಮರುಳ ಚಿಕ್ಕಮ್ಮ ಸನ್ನಿಧಿಯ ಮೊತ್ತೇಸರ ನೋಣಯ್ಯ ಬಂಗೇರ ಸಮುದಾಯದ 15 ಮಂದಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಕನ್ನಡ ಪದಕೋಶವನ್ನು ಕೊಡುಗೆಯಾಗಿ  ನೀಡಿ  ಮಾತನಾಡಿ, ಮಕ್ಕಳ ಶಿಕ್ಷಣ ಮುಖ್ಯ, ಅದರ ಬಗ್ಗೆ ಕಾಳಜಿ, ವಹಿಸಿ ಎಂದು ಹೆತ್ತವರಿಗೆ ಕರೆ ನೀಡಿದರು.

1ನೇ ತರಗತಿಯಿಂದ ಪಿಯುಸಿವರೆಗಿನ 90 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಬಂಟ್ವಾಳ ತಾ। ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ, ಪುರಸಭೆ ಸದಸ್ಯ ಕೊರಗಪ್ಪ, ಮಂಜೇಶ್ವರ ಸಬ್‌ರಿಜಿಸ್ಟ್ರಾರ್ ಕಚೇರಿಯ ಹರೀಶ್ ಕುಮಾರ್, ರಾಜ್ಯ ಸರಕಾರದ ಜೀತ ಪದ್ಧತಿ ನಿರ್ಮೂಲನ ಸಮಿತಿ ಉಪವಿಭಾಗದ ಸದಸ್ಯ ಶಿವಾನಂದ ಪಾಂಡು ಮುಖ್ಯ ಅಭ್ಯಾಗತರಾಗಿದ್ದರು. 

ಮಕ್ಕಳು ಸಾಂಸ್ಕೃತಿಕ ಕಲಾಪ ಪ್ರಸ್ತುತ ಪಡಿಸಿದರು.

ಅಶ್ವಿನಿ ಕೇಶವ ಮಾರೂರು ಸ್ವಾಗತಿಸಿದರು. ಹರೀಶ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಹರಿಪ್ರಸಾದ್ ವಂದಿಸಿದರು.

ADVRTISEMENT