ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಸುಮಾರು ಒಂದು ಲಕ್ಷ ರೂ. ಅಧಿಕ ಮೌಲ್ಯದ ಹತ್ತು ಬ್ಯಾರಿಕೇಡ್ ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು. ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ. ಯವರಿಗೆ ಬ್ಯಾರಿಕೇಡ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅಭಯಚಂದ್ರರವರು ರಸ್ತೆ ಸಮಸ್ಯೆನಿವಾರಣೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಪೊಲೀಸರಿಗೆ ಅನುಕೂಲವಾಗಲೆಂದು ಬ್ಯಾರಿಕೇಡ್ ನೀಡಿರುವುದಾಗಿ ತಿಳಿಸಿದರು. ಸಂದೇಶ್ ಪಿ. ಜಿ.ಯವರು ಮಾತನಾಡಿ ಸಮಾಜ ಮಂದಿರ ನೀಡಿರುವ ಬ್ಯಾರಿಕೇಡ್ ಪೊಲೀಸರಿಗೆ ಅನುಕೂಲವಾಗಲಿದೆ. ಅತಿಯಾದ ಮಳೆ ಸಂದರ್ಭದಲ್ಲಿ ನೆರೆಯಂತಹ ಅಪಾಯಕಾರಿ ಸನ್ನಿವೇಶ ಎದುರಿಸಲು ಅಗತ್ಯ ಎಂದು ಹೇಳಿ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಸಮಾಜ ಮಂದಿರ ಸಭಾ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಹೆಚ್ ಸುರೇಶ್ ಪ್ರಭು, ಸದಸ್ಯರಾದ ಜಯರಾಜ್ ಕಾಂಬ್ಳಿ, ಅಬ್ದುಲ್ ಗಫೂರ್, ರಾಮ್ ಪ್ರಸಾದ್, ಎಂ. ಎಸ್. ಕೋಟ್ಯಾನ್, ಗಣೇಶ್ ಕಾಮತ್, ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ, ಎ ಎಸ್. ಐ. ರಾಜೇಶ್, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply